Tuesday, March 31, 2009

ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್



ಅಡುಗೆಮನೆಯೆಂಬ ಪ್ರಯೋಗಶಾಲೆಯಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ನಡೆಯುತ್ತಿರಬೇಕು ಕೂಡ. ಬಳಸುವ ಪದಾರ್ಥಗಳಲ್ಲೇ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡರೆ ಹೊಸದೊಂದು ರುಚಿ ಹುಟ್ಟಿಕೊಂಡಿರುತ್ತದೆ. ಮಾಮೂಲಿ ಬಿಳಿ ಇಡ್ಲಿ ಸಾಂಬಾರ್ ಮೆಲ್ಲುವುದಕ್ಕಿಂತ ಅಡುಗೆಮನೆಯೆಂಬ ಲ್ಯಾಬಿನಲ್ಲಿ ಹೊಸಬಗೆಯ ಮೆಂತ್ಯ ಇಡ್ಲಿ ಮತ್ತು ಹುರಿದ ಬೇಳೆ ಸಾಂಬಾರ್ ಕಾಂಬಿನೇಷನ್ ಟೆಸ್ಟ್ ಮಾಡಿ ಟೇಸ್ಟ್ ಮಾಡಿ ನೋಡಿ.

ಮೆಂತ್ಯ ಇಡ್ಲಿ

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಕುಸುಬುಲ ಅಕ್ಕಿ - 4 ಲೋಟ
ಮೆಂತ್ಯದ ಕಾಳು - 3 1/2 ಚಮಚ
ಕಲ್ಲುಪ್ಪು - 4 ಚಮಚ

ತಯಾರಿಸುವ ವಿಧಾನ

1. ಮೆಂತ್ಯದ ಕಾಳುಗಳನ್ನು ಒಟ್ಟಿಗೆ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ.
2. ಅಕ್ಕಿಯನ್ನು ಪ್ರತ್ಯೇಕವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿರಿ.
3. 1/2 ಗಂಟೆಗಳ ಕಾಲ ಮೆಂತ್ಯವನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿ.
4. ಅಕ್ಕಿಯನ್ನು ಸಣ್ಣ ರವೆಯಷ್ಟಾಗುವವರೆಗೆ ಹದವಾಗಿ ರುಬ್ಬಿರಿ. ರುಬ್ಬಿದ ಮೆಂತ್ಯ ಮತ್ತು ಅಕ್ಕಿಯನ್ನು ಒಟ್ಟಿಗೆ ಉಪ್ಪಿನೊಂದಿಗೆ ಬೆರೆಸಿರಿ.
5. ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ 10 ಗಂಟೆಗಳ ಕಾಲ ಅದನ್ನು ಮುಚ್ಚಿಟ್ಟುಬಿಡಿ.
6. ಸಾಧಾರಣವಾದ ರೀತಿಯಲ್ಲಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ.

ಸೂಚನೆ : ಯಾವಾಗಲೂ ಉಪ್ಪನ್ನು ಕೊನೆಯಲ್ಲಿ ಸೇರಿಸಬೇಕು ರುಬ್ಬುವ ಮೊದಲು ಉಪ್ಪನ್ನು ಬೆರೆಸಿದರೆ ಇಡ್ಲಿಗಳು ಗಟ್ಟಿಯಾಗುತ್ತದೆ.

ಹುರಿದ ಬೇಳೆ ಸಾಂಬಾರ್

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಈರುಳ್ಳಿ - 2
ಟೊಮೇಟೊ - 3
ಆರಿಷಿಣ ಪುಡಿ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೇಕಾದರೆ ಸಕ್ಕರೆ ಅಥವಾ ಬೆಲ್ಲ
ದನಿಯಾ - 1 ಚಮಚ
ಕೆಂಪು ಮೆಣಸಿನಕಾಯಿ - 8
ಹುರಿದ ಕಡಲೆ ಬೇಳೆ - 1 1/2 ಚಮಚ

ತಯಾರಿಸುವ ವಿಧಾನ

ಮೊದಲು ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿರಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವು, ಅರಿಷಿಣ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ.

ನಂತರ ದನಿಯಾ, ಕೆಂಪು ಮೆಣಸಿನಕಾಯಿ ಮಿಶ್ರಣ ಮತ್ತು ಕಡಲೆಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ದನಿಯಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಕುದಿಬಂದ ನೀರಿಗೆ ಸೇರಿಸಿರಿ. ಕೆಲ ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸುವ ಮುನ್ನ ಪುಡಿ ಮಾಡಿದ ಬೇಳೆಯನ್ನು ನೀರಿನಲ್ಲಿ ಕಲಸಿ, ಇದಕ್ಕೆ ಸೇರಿಸಿರಿ. ಇದಕ್ಕೆ ಖಮ್ಮಗೆ ವಾಸನೆ ಬರಲು ಕೊತ್ತಂಬರಿ ಕತ್ತರಿಸಿ ಹಾಕಿರಿ.

**** ಗೋಪಿಕಾರವೀಂದ್ರ.

ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!



ಹಾಗಲಕಾಯಿ ಒಂದು ಒಳ್ಳೆಯ ತರಕಾರಿ. ಕಹಿಯಿರುವುದರಿಂದ ಔಷಧೀಯ ಗುಣವೂ ಅದರಲ್ಲಿದೆ. ಹಾಗಲ ರುಚಿಯಲ್ಲಿ ಕಹಿಯಾದರೂ, ದೇಹಾರೋಗ್ಯಕ್ಕೆ ಸಿಹಿ. ಹಾಗಲದಂಥ ತರಕಾರಿಯಿಲ್ಲ ಎನ್ನುತ್ತಾರೆ ಅನುಭವಸ್ಥರು.

ತುಳುನಾಡಿನಲ್ಲಂತೂ ‘ಕಂಚಾಲ್‌ ಇತ್ತ್‌ಂಡಾ ಎಂಚಾಲಾ ಉಣೋಳಿ...’ (ಹಾಗಲಕಾಯಿ ಇದ್ದರೆ ಹೇಗೂ ಉಣ್ಣಬಹುದು) ಎಂಬ ನಾಣ್ಣುಡಿಯೇ ಇದೆ. ಹಾಗಲ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಎನ್ನುತ್ತಾಳೆ ಅಜ್ಜಿ . ಹಾಗಲ ಮಧುಮೇಹಕ್ಕೆ, ಅರ್ಥಾತ್‌ ಸಕ್ಕರೆ ಕಾಯಿಲೆಗೆ ರಾಮಬಾಣ ಎನ್ನುತ್ತಾರೆ ಅಳಲೇಕಾಯಿ ಪಂಡಿತಧಿರು. ಒಟ್ಟಾರೆ ಸಾರಾಂಶ ಇಷ್ಟೇ, ಹಾಗಲ ಎನ್ನುವುದು ತರಕಾರಿಯಷ್ಟೇ ಅಲ್ಲ , ಔಷಧಿಯೂ ಹೌದು. ಹಾಗಾಗಿ ರುಚಿಯಷ್ಟೇ ಅಲ್ಲ, ಆರೋಗ್ಯಭಾಗ್ಯವೂ ಹಾಗಲದಿಂದ ಲಭ್ಯ ಎಂದಾಯಿತು.

ಇಂತಿಪ್ಪ ಹಾಗಲಕಾಯಿಯಿಂದ ರುಚಿಯಾದ ಖಾದ್ಯಗಳ ಮಾಡುವುದು ಹೇಗೆ ? ಬನ್ನಿ, ಹಾಗಲಕಾಯಿಯ ಎರಡು ನಮೂನೆ ಪಲ್ಯಗಳನ್ನು ಹಾಗೂ ಚಟ್ನಿಯನ್ನು ಮಾಡೋಣ. ಮಾಡಿ ಸವಿಯೋಣ. ಸವಿದು ಆರೋಗ್ಯವಂತರಾಗೋಣ.

*

ಹಾಗಲಕಾಯಿ ಪಲ್ಯ

(ವಿಧಾನ 1)

ಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಕೊತ್ತಂಬರಿ - 3 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ತುರಿದ ತೆಂಗಿನಕಾಯಿ - 3/4 ಕಪ್‌
ಹುಣಿಸೆಹಣ್ಣು - 1/2 ನಿಂಬೆಗಾತ್ರದ್ದು
ಬೆಲ್ಲ - 100 ಗ್ರಾಮ್‌ನಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಾಗಲಕಾಯಿಯನ್ನು ಸಣ್ಣಕ್ಕೆ ಹೆಚ್ಚಿಕೊಂಡು, ಬಾಣಲೆಯಲ್ಲಿ ಎಣ್ಣೆ ಇಟ್ಟು, ಸಾಸಿವೆ ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಹಾಕಿ, ಸಾಸಿವೆ ಸಿಡಿದ ನಂತರ ಹಾಗಲಕಾಯಿಯನ್ನು ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕೊತ್ತಂಬರಿ, ಮೆಣಸು, ಕಾಯಿತುರಿ, ಬೆಲ್ಲ , ಹುಣಿಸೆ - ಇಷ್ಟನ್ನು ಮಿಕ್ಸಿಯಲ್ಲಿ ಅರೆದು, ಬೆಂದ ಹಾಗಲಕಾಯಿಗೆ ಹಾಕಿ ಇನ್ನೂ ಸ್ವಲ್ಪಹೊತ್ತು ಚೆನ್ನಾಗಿ ಕುದಿಸಬೇಕು.

ಘಂ ಎನ್ನುವ ಹಾಗೂ ಆರೋಗ್ಯಕರ ಹಾಗಲ ಪಲ್ಯ ಸಿದ್ಧ .

*

ಹಾಗಲಕಾಯಿ ಪಲ್ಯ : ವಿಧಾನ -2

ಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಹಸಿರು ಮೆಣಸು (ಕಾಯಿ) - 4 ಅಥವಾ 5
ಈರುಳ್ಳಿ 1 (ಮಧ್ಯಮ ಗಾತ್ರ)
ನಿಂಬೆ - 1 ಹೋಳು
ಕಾಯಿತುರಿ - 3-4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು .

ಮಾಡುವ ವಿಧಾನ : ಮೊದಲು ಕಡಲೆಬೇಲೆ-ಉದ್ದಿನಬೇಳೆ-ಸಾಸಿವೆ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನ ಹೋಳುಗಳನ್ನು ಸೇರಿಸಿ ಆಮೆಲೆ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟದ್ದು) ಹಾಕಿ. ಈರುಳ್ಳಿ ಸ್ವಲ್ಪ ಬಾಡಿದ ನಂತರ ಹಾಗಲಕಾಯಿ ಹಾಕಿ. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ತೆಂಗಿನಕಾಯಿ ಉದುರಿಸಿ ನಿಂಬೆರಸ ಸೇರಿಸಿ ಕಲಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲಿಕ್ಕೆ ಸಕತ್ತಾಗಿರುತ್ತದೆ!

*

ಹಾಗಲಕಾಯಿ ಚಟ್ನಿ

ಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಕಡಲೆ ಬೇಳೆ - 2 ಟೇಬಲ್‌ಸ್ಪೂನ್‌
ಉದ್ದಿನಬೇಳೆ - 2 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10

ಮಾಡುವ ವಿಧಾನ : ಕಡಲೆ ಬೇಳೆ, ಉದ್ದಿನಬೇಳೆ, ಕೆಂಪುಮೆಣಸನ್ನು ಜತೆಯಾಗಿ ಹುರಿದುಕೊಂಡು, ಹುಣಸೆಹಣ್ಣು , ಬೆಲ್ಲ , ಉಪ್ಪು, ಮತ್ತು ಹಾಗಲಕಾಯಿ (ಪ್ರತ್ಯೇಕವಾಗಿ ಹುರಿದದ್ದು) ಹಾಕಿ ಮಿಕ್ಸಿಯಲ್ಲಿ ಅರೆದರೆ ಚಟ್ನಿ ರೆಡಿ! ಅನ್ನಕ್ಕಾದರೂ ಸೈ, ಚಪಾತಿ-ರೊಟ್ಟಿಗಾದರೂ ಸರಿ.
ಹಾಗಲದ ಪದಾರ್ಥಗಳನ್ನು ತಿನ್ನಿ ; ಆರೋಗ್ಯವಂತರಾಗಿರಿ.

***ಗೋಪಿಕಾರವೀಂದ್ರ